Thursday 29 January 2015

ಋತುಮಾನದ ಮೌನ ಸಾಕು
ಸದ್ದಾಗಿಬಿಡು ಮನದ ಮಾತಿಗೆ
ಅಗಲಿಕೆಯ ನೋವು, ನಿಟ್ಟುಸಿರ ಕಾವು
ಬೇಗುದಿಯ ಭಾವ  ದುಸ್ತರವೀ ಬದುಕಿಗೆ..!!

ಒಲವ ಹೊಳೆ ಹರಿಸಿದ
ನಿನ್ನ ಕಣ್ಣೊಳಗೆ ಬಚ್ಚಿಟ್ಟು ಹುದುಗಬೇಕಿದೆ
ಯಾರಿಗೂ ಕಾಣದಂತೆ, ಬೇರಾರೂ ನೋಡದಂತೆ
ಅಲ್ಲೇ ಸಂಚರಿಸಬೇಕಿದೆ
ನಿನಗೂ ತಿಳಿಯದಂತೆ, ನಿನ್ನೊಳಕ್ಕೆ ಇಳಿಯದಂತೆ..!!

ಕಲ್ಪನೆಗಳು ಸಾಕಾಗಿದೆ,
ವಾಸ್ತವವ ಅರಿಯಬೇಕಿದೆ
ನಿನ್ನ  ಇನ್ನಂತೂ ಸೇರಬೇಕಿದೆ
ಕಡಲ ಅಲೆಗಳು ಅಪ್ಪುವಂತೆ
ಅಲ್ಲೇ ನೆಲೆ ಹೂಡಬೇಕಿದೆ
ಮತ್ಸ್ಯಕ್ಕೂ ತಿಳಿಯದಂತೆ, ಅಂಬಿಗನಿಗೂ ಮುಟ್ಟದಂತೆ..!!

ಹುಟ್ಟು-ಸಾವಿಗೆ ಅರ್ಥ ತಂದಿರುವೆ
ಬದುಕು ಚಿಂತೆಗಳ ಸಂತೆ
ಅಲ್ಲಿ ನಾನಿಲ್ಲ, ಅಲ್ಲಿ ನೀನೂ ಇಲ್ಲ
ಇಬ್ಬರೂ ಸೇರಿ ಸೌಧ ನಿರ್ಮಿಸಬೇಕಿದೆ
ಯಾರೂ ಕೆಡುಹದಂತೆ, ಮತ್ಯಾರೂ ಒಳಬಾರದಂತೆ..!!

- ಭಾಚಿ

No comments:

Post a Comment